Suladhi

ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ

( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.
ಭಕ್ತಾಭೀಷ್ಟದತ್ತಾ , ಸದಾ ನಿನ್ನ ಸ್ಮರಣೆಯನ್ನಿತ್ತು , ಸದ್ವಿದ್ಯೆಯನ್ನು ದಯಪಾಲಿಸಿ , ಈ ಭವಬಂಧನದಿಂದ ಬಿಡುಗಡೆ ಮಾಡು. )

ರಾಗ ಮಲಯಮಾರುತ

ಧ್ರುವತಾಳ

ದತ್ತಾ ಯೋಗೀಶ ಯೋಗಿ ಯೋಗಶಕ್ತಿಪ್ರದ
ದತ್ತಾ ಪ್ರಣತರಿಗೆ ಪ್ರಣವಪ್ರತಿಪಾದ್ಯ
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ –
ದತ್ತ ಮಾಡಿಕೊಡುವ ದೀಪ್ತಾ ಚೂಡಾ
ದತ್ತಾ ಚೀರಾಂಬರಗೇಯಾ ವಲ್ಕಲವಾಸ
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ –
ವಿತ್ರ ಧಾರಣದೇವಾ ದೇವವಂದ್ಯಾ
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ
ದೈತ್ಯ ಮೋಹಕ ರೂಪಾ ಘನ ಪ್ರತಾಪಾ
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ –
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ
ಕೀರ್ತಿ ಪಾವನವಪುಷ ವೈಕುಂಠವಾಸ ತಪೋ –
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ –
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ
ತಪ್ತಾಂಚನಗಾತ್ರಾ ನಿರ್ಜರಾಪ್ತಾ
ಚಿತ್ರ ವಿಚಿತ್ರ ಕರ್ಮ  ವಿಜಯವಿಟ್ಠಲರೇಯಾ
ದತ್ತಾವತಾರ ಭಗದತ್ತಾಯುಧಧಾರಿ ॥ 1 ॥

ಮಟ್ಟತಾಳ

ದತ್ತ ಜ್ಞಾನದತ್ತಾ ದತ್ತ ಭಕುತಿದತ್ತಾ
ದತ್ತ ಶ್ರವಣದತ್ತಾ ದತ್ತ ಮನನದತ್ತಾ
ದತ್ತ ದಾನದತ್ತಾ ದತ್ತಾ ಸಾಧನದತ್ತಾ
ದತ್ತ ಚಿತ್ತದತ್ತಾ ದತ್ತವಿರಕ್ತಿ ದತ್ತಾ
ದತ್ತ ಮಾರ್ಗದತ್ತಾ ದತ್ತಾ ದತ್ತಾ ಇಷ್ಟದತ್ತಾ
ದತ್ತ ಸರ್ವದತ್ತಾ ದತ್ತ ಭೋಗದತ್ತಾ
ದತ್ತಾನಂದದತ್ತಾ ದತ್ತ ತನ್ನನೆದತ್ತಾ ದತ್ತಾತ್ರೇಯ
ದತ್ತ ಮೂರುತಿ ನಮ್ಮ ವಿಜಯವಿಟ್ಠಲರೇಯಾ
ದತ್ತನೆಂದವನಿಗೆ ದತ್ತ ಮಗನಾಹಾ ॥ 2 ॥

ತ್ರಿವಿಡಿತಾಳ

ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನುಸೂಯ ವರಸೂನು ಕರ್ದಮ ದೌಹಿತ್ರ
ಗುಣಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ
ನೆನೆಸಿದವರ ಮಸ್ತಕದಲ್ಲಿ ಸುಳಿವ
ಮನಸಿಜ ಜನಕ ಜಗನ್ಮೋಹನಾ
ಕನಸಿನೊಳಾದರೂ ಕಳವಳಿಕಿಯಿಂದಾಡೆ
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ
ಘನ ಶುದ್ಧಾತ್ಮನು ಕಾಣೊ ಗೌರವರ್ಣಾ
ಉಣಿಸುವ ತನ್ನಯ ನಾಮಾಮೃತವ ವ –
ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ
ಜನ ಸುಮ್ಮನಿರದಲೆ ಜಪಿಸಿ ಈತನ ನಾಮಾ
ಮಣಿ ಸಾರಿಸಾರಿಗೆಲಿ ಎಣಿಕೆ ಗೈಯೊ
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ॥ 3 ॥

ಅಟ್ಟತಾಳ

ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಅ –
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ –
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯವಿಟ್ಠಲ ಭವ –
ರೋಗದ ವೈದ್ಯ ವೈಲಕ್ಷಣ್ಯ ॥ 4 ॥

ಆದಿತಾಳ

ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯಪರ್ವತ ವಿಭೇದನಾ
ಅಯುತದುರಿತ ರೋದನಾ
ಕ್ಷಯರಹಿತ ಸನ್ಮೋದನಾ
ಜಯಜಯವೆಂದು ದತ್ತಾ ಮಂತ್ರಾ
ಪ್ರಿಯವಾಗಿಪ್ಪದು ಗತಿಲಬ್ಧಾ
ಲಯವಾಗುವದು ಪ್ರಾರಬ್ಧಾ
ಜಯಜಯವೆನ್ನನೊ ಬಲುಲಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ಧಾ
ಪಯಳಾಯಂತಿದೆ ನೋಡಬ್ಧಾ
ದಯಪೂರ್ಣ ನಮಗೆ ವಿಜಯವಿಠ್ಠಲ ದತ್ತ
ಬಯಕೆ ಕೊಡುವದು ಒಲಿದು ಬಿಡಬ್ಧ ಅಬ್ಧಾ ॥ 5 ॥

ಜತೆ

ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ –
ತಂತ್ರರಹಿತ ವಿಜಯವಿಟ್ಠಲ ಪ್ರಜ್ಞಾ ॥

https://drive.google.com/file/d/108GMUy5U-frSUn4z1_97Ft6Bi9Eq2t-U/view?usp=drivesdk

Leave a Reply

Your email address will not be published. Required fields are marked *