ಹರಿದಾಸ ಲಕ್ಷಣ ಸುಳಾದಿ
ಶ್ರೀ ವಿಜಯದಾಸಾವಿರಚಿತ
( ಹರಿಭಕ್ತನಾದ ಹರಿದಾಸನು ಆಚರಿಸುವ ಬಗೆ , ಲಕ್ಷಣ )
ರಾಗ ದರ್ಬಾರಿ ಕಾನಡ
ಧ್ರುವತಾಳ
ಹರಿದಾಸರ ಲಕ್ಷಣ ಇರಬೇಕು ಈ ಪರಿ
ಗರುವ ಕೋಪ ಮದ ಮತ್ಸರಾದಿ ಬಿಡಬೇಕು
ಮರುತ ಮತಕೆ ಎಲ್ಲಿ ಸರಿಗಾಣೆನೆನುತಲಿ
ಧರಿಯೊಳು ಕೂಗಿ ಡಂಗುರವ ಹೊಯಲಿಬೇಕು
ಎರಡಾರು ಪುಂಡ್ರವ ವಿರಿಚಿಸಿ ಪಂಚಮುದ್ರಾ –
ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ
ಶಿರಿಬೊಮ್ಮ ಹರಾದ್ಯರಿಗೆ ತಾರತಮ್ಯ ಭಾವದಿಂದ
ಎರಗಿ ಎನ್ನೊಳಗಿದ್ದು ಪೊರೆಯೆಂದಾಡಲಿಬೇಕು
ಕರಣ ನಯನ ಶ್ರವಣ ಚರಣ ನಾಸ ವದನ
ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು
ಗುರುಹಿರಿಯರಿಗೆ ಆದರ ಪೂರ್ವಕದಿಂದ
ಕರವ ಮುಗಿದು ನಮಸ್ಕರಿಸಿ ನುತಿಸಬೇಕು
ನೆರೆಹೊರೆಯವರಿಗೆ ನಿರುತ ಇದ್ದರು ಬೇ –
ಸರಗೊಳಿಸದೆ ಸಂಚರಿಸುತ್ತಲಿರಬೇಕು
ಹರಣ ಹರಿಯಾಧೀನ ನೆರೆದ ಸತಿಸುತರು
ನಿರುತ ಹರಿಗೆ ದಾಸರು ಎಂದು ಗುಣಿಸಬೇಕು
ಪರಮ ಭಕುತಿ ಜ್ಞಾನ ವಿರಕುತಿ ಮಾರ್ಗವು
ದೊರಕುವದಕ್ಕೆ ಸಜ್ಜನರ ಸಂಗವಾಗಬೇಕು
ಹರಿವಾಸರ ಹರಿಚರಿತೆ ಹರಿಶ್ರವಣ ಹರಿಪೂಜೆ
ಹರಿಸ್ಮರಣೆ ಅಂತರ ಶುಚಿ ಇರಲಿಬೇಕು
ಹರಿ ಪರದೇವತಿ ವಿಜಯವಿಟ್ಠಲ ಗತೀ
ಸುರರಾದ್ಯರಿಗೆಂದು ಉರವಣಿಸಿ ನುಡಿಬೇಕು ॥ 1 ॥
ಮಟ್ಟತಾಳ
ಪರಧನ ಪರಸತಿ ಪರನಿಂದ್ಯದವರ
ಸರಸದಲ್ಲಿರದೆ ಚರಿಸಬೇಕು ದೂರ
ನರರು ಬೈದರೆ ಆದರವೆಂದು ತಿಳಿದು
ಹರುಷ ಬಡಲಿಬೇಕು ಸುರತರು ದೊರೆತಂತೆ
ಕರದು ಮನ್ನಿಸಿದರು ಇರಳು ಹಗಲು ಪಾಲುಗರೆವ
ಸುರಧೇನು ಬರಡಾಗಿನಿಂದ ಪರಿಯೆಂದೆನಬೇಕು
ನೆರದು ಸಂದಣಿಯೊಳು ಚರಿಸಬಾರದು ಪೋಗಿ
ಬರಿದೆ ಕುಳಿತು ಹಾಳಹರಟಿಯ ಪೇಳದಲೆ
ಮರಿಯದೆ ಸೊಲ್ಲು ಇರಬೇಕು ತನ್ನೊಳಗೆ
ಪರಮ ತತ್ತ್ವವ ತಿಳಿದು ದುರುಳರಿಗರುಹದಲೆ
ಸುರಿಯಬೇಕು ಸುಖವ ಮರಳಿ ಮರಳಿ ನೆನೆದು
ಪರಮ ಗುಪ್ತನಾದ ವಿಜಯವಿಟ್ಠಲರೇಯನ
ನೆರೆ ನಂಬಲಿಬೇಕು ಕುರುಹ ಕಾಣುವಂತೆ ॥ 2 ॥
ತ್ರಿವಿಡಿತಾಳ
ಲೇಸಾದರು ಹರಿಯ ಕಾರುಣ್ಯವೆನಬೇಕು
ಲೇಸಾಗದೆ ಬಲು ಮೋಸದಲ್ಲಿ
ಕ್ಲೇಶ ಬಂದಡರಲು ಏಸು ಜನ್ಮದ ಪಾಪ
ರಾಸಿಯ ಫಲಿಸಿತೊ ಎನ್ನ ಕರ್ಮ
ಈ ಶರೀರಕೆ ಬಂದು ಪ್ರಾಪ್ತವಾದದ್ದು ಅನುಭ –
ವಿಸದಲೇ ಬಿಡದು ಸಿದ್ಧವೆಂದು
ಲೇಶವಾದರೂ ದುಃಖ ಹಚ್ಚಿಕೊಳ್ಳದೆ ಮಹಾ
ತೋಷದಲ್ಲಿರಬೇಕು ನೋಯದಲೆ
ಶ್ರೀಶನೆ ಗತಿ ಎಂದು ಬೇಸರದಲೆ ಬಂದ
ಕ್ಲೇಶಗಳುಣಬೇಕು ಬಂದಾಗಲು
ದೇಶ ಕಾಲ ಗುಣ ಪರಿಪೂರ್ಣ ಹರಿ ಇರೆ
ಘಾಸಿ ಎಲ್ಲಿದೊ ಎಂದು ನಲಿಯಬೇಕು
ಶ್ರೀ ಸತಿ ಕಾಲ ವೇದ ಜೀವ ಪ್ರಳಯದಲ್ಲಿ
ನಾಶವಾಗವು ಭೇದ ಅನಲಿಬೇಕು
ವ್ಯಾಸ ವಚನ ಮಧ್ವರಾಯರು ಮಾಡಿದ
ಭಾಷ್ಯ ಸಮ್ಮತದಿಂದ ನೋಡಬೇಕು
ವಾಸುದೇವ ನಮ್ಮ ವಿಜಯವಿಟ್ಠಲನ್ನ
ದಾಸಾನುದಾಸರ ದಾಸನಾಗಲಿಬೇಕು ॥ 3 ॥
ಅಟ್ಟತಾಳ
ಬಡತನ ಬಂದರು ಹಿಗ್ಗುತಲಿರಬೇಕು
ಜಡನಾಗಿ ಬಾಹಿರದಲ್ಲಿ ತೋರಲಿಬೇಕು
ಅಡಿಗಡಿಗೆ ಲಜ್ಜೆಗೆಡಬೇಕು ಸರ್ವದ
ಒಡಲಿಗೆ ಚಿಂತೆ ಮಾಡದೆ ದೃಢ ಇರಬೇಕು
ಒಡವೆ ವಸ್ತ್ರ ತಂದೆ ತಾಯಿ ತ್ರಿಲೋಕದ
ಒಡಿಯ ಶ್ರೀಕೃಷ್ಣನೆಂದು ಬಿಡದೆ ನಂಬಲಿಬೇಕು
ಯಡಿಗೆ ಪರಿಮಿತ ಧಾನ್ಯ ತರಲಿಬೇಕು
ಕೊಡಬೇಕು ಕೊಡಬೇಕು ಒಬ್ಬರಿಗದರೊಳು
ಕಡುಗಲಿ ವಿಜಯವಿಟ್ಠಲ ರಂಗನ ಪಾದ
ಪಿಡಿದು ಭಜಿಸಬೇಕು ನಲಿನಲಿದಾಡುತ್ತ ॥ 4 ॥
ಆದಿತಾಳ
ಉಟ್ಟದಕ್ಕಿಂತ ಮೇಲು ತೊಟ್ಟದಕ್ಕಿಂತ ಮೇಲು
ಇಟ್ಟದಕ್ಕಿಂತ ಮೇಲು ವಿಟ್ಠಲನ್ನ ಸ್ಮರಣೆ ಮನ
ಮುಟ್ಟಿ ನಮಿಸಲಿ ಬೇಕು ಬಲು ವಿಹಿತದಲ್ಲಿ
ಅಟ್ಟಹಾಸದಲ್ಲಿ ಚೀರಿ ಚಿಟ್ಟಿಕ್ಕಿ ಕೂಗಿ ತೂಗುತ
ಇಷ್ಟ ಸುಖಕ್ಕಿಂತ ಮೇಲು
ದಟ್ಟಡಿಯಿಂದ ತಿಳಿದು ನಿಷ್ಠೆಯಿಂದ ಇರಲು
ಇಷ್ಟ ಪ್ರಾಪುತ ಅವರಿಗರಿಷ್ಠವು ಪರಿಹಾರ
ಹುಟ್ಟುಸಾವಿಲ್ಲದ ವಿಜಯವಿಟ್ಠಲ ತಾನು
ಕೊಟ್ಟು ಸಾಕುವ ದಯವಿಟ್ಟು ದಾಸನ ಮಾಡಿ ॥ 5 ॥
ಜತೆ
ಈ ಪರಿ ಇದ್ದವಂಗೆ ಅನಂತ ಜನುಮಕ್ಕೆ
ತಾಪತ್ರಯಗಳಿಲ್ಲ ವಿಜಯವಿಟ್ಠಲ ಬಲ್ಲ ॥
https://drive.google.com/file/d/1-rUWQ8DMnplbCHqS60mfJnBUy7dgkhtE/view?usp=drivesdk