Suladhi

ಸೃಷ್ಟಿ ಸುಳಾದಿ

ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾ ವಿರಚಿತ

( ಸೃಷ್ಟಿ ವಿವರ : ತ್ರಿವಿಧ ಜಡ – ಚೇತನ ಲಕ್ಷಣ ವಿಚಾರ )

ರಾಗ ಸಿಂಧುಭೈರವಿ

ಧ್ರುವತಾಳ

ತೊಲಗಿ ಪೋಗುವದಲ್ಲ ತೋಂಡನಾದ ಕಾಲಕ್ಕು
ಜಲಜ ಸಂಭವನು ಅನಾದಿಯಿಂದ
ನೆಲೆಯಾಗಿ ಮಾಡಿದ ಸಂಕಲ್ಪವೆಂದಿಗು
ತಲೆದೂಗಿದರೆ ತಪ್ಪಲರಿಯದಿದಕೋ
ಕಾಲ ಕಾಲಕ್ಕೆ ತಿಳಿಯದ ಕಠಿಣವಾದ ಮೋಹ –
ಬಲೆಯೊಳು ಸಿಗಬಿದ್ದು ಭ್ರಮಣನಾಗಿ
ತಿಲ ಮಾತುರ ದುಃಖ ಅನುಭವವಲ್ಲೆಂದು
ಹಲವು ಸೌಖ್ಯಂಗಳ ಹಂಬಲಿಸಿ
ಹಲುಬಿ ಹಲುಬಿ ನಿತ್ಯ ತಳಮಳಗೊಂಡರಾಗೆ
ಫಲವಿಲ್ಲ ಫಲವಿಲ್ಲ ನಿಜವಾಹದು
ಬಲು ಮೂಢತನವುಳ್ಳ ಬಾಲಭಾವದ ಚಂ –
ಚಲ ಬುದ್ಧಿಯನ್ನೇ ಬಿಟ್ಟು ಚತುರನಾಗಿ
ತಿಳಿವ ಮಾರ್ಗವೆ ಕೇಳು ತೀವ್ರದಿಂದಲಿ ನಿ –
ರ್ಮಳ ಪರಿಚ್ಛೇದದಲ್ಲಿ ನಿಲ್ಲಿಸಿಹ ಮನವೆ
ಬಲವಂತಳಾಗಿದ್ದ ಸಿರಿ ಬೊಮ್ಮ ಜೀವ ಜಡ
ಮಿಳಿತವಾಗಿದ್ದ ಜಗವೆ ಚಿದ ಚಿದಾತ್ಮಕವೆಂದು
ಪೊಳೆಯುತ್ತಲಿದೆ ಬಲ್ಲ ಜ್ಞಾನಿಗಳಿಗೆ
ಜಲಧಾರಾವರ್ನ ನಮ್ಮ ವ್ಯಾಸವಿಟ್ಠಲನಂಘ್ರಿ
ನಿಲಿಸಿ ನಿನ್ನೊಳು ಮುಂದೆ ತಿಳಿಯೊ ಇದರ ವಿವರ ॥ 1 ॥

ಮಟ್ಟತಾಳ

ದ್ವಿವಿಧಾತ್ಮಕವಾದ ಜಗವು ನಾಲ್ಕು ಬಗೆ
ವಿವರದಲ್ಲಿಪ್ಪದು ಪ್ರಾಕೃತ ಅಪ್ರಾಕೃತ ವೈಕೃತ
ತ್ರಿವಿಧವು ಅತಿಸ್ಥೂಲ ವೈಕೃತವೆಂದು ಸಂ –
ಭವಿಸಿಪ್ಪದು ಗಡಾ ಒಂದು ಮಾತುರ ಬಿಟ್ಟು
ತವಕದಿ ನೀಕ್ಷಿಸಲು ಒಂದಕ್ಕೆ ಒಂದಧಿಕ
ದ್ವಿವಿಧವು ಸರಿ ಎನ್ನು ಅನುಮಾನವೆ ಸಲ್ಲಾ
ಪವನನಂತರಯಾಮಿ ವ್ಯಾಸವಿಟ್ಠಲ ಇಂತು
ನವ ನವ ಕೃತ್ಯವನು ಮಾಡುವನೆಂದರಿಯೊ ॥ 2 ॥

ತ್ರಿವಿಡಿತಾಳ

ವರ್ಣಾತ್ಮಕವಾದ ವೇದ ದೇಶ ಕಾಲ
ಪರಮಾಣು ಪುಂಜ ಪ್ರಕೃತಿಯೆ ನಾಲ್ಕು ಬಗೆ
ಕರಿಸಿಕೊಳುತಲಿವೆ ಪ್ರಾಕೃತ ನಾಮದಲಿ ಚ –
ತುರ ಪದಾರ್ಥಂಗಳು ಚಿರಕಾಲದಿ
ಪರಿಮಿತ ತೊರದು ಬ್ರಹ್ಮಾದ್ಯರಿಗೆ ಅ –
ಪರಿಚ್ಛಿನ್ನ ವಹದು ಆಗಮ ವಾಕ್ಯವೆ ಸಿದ್ಧಾ
ಪರಿಯ ಕೇಳಿದು ಒಂದರಂತೆ ಒಂದಲ್ಲ ಮುಂ –
ದರಿಯೊ ವಿಕಾರವು ಎಂದಿಗಾದರು
ಚಿರ ಪದಾರ್ಥಂಗಳು ಚಿನ್ಮಯ ಹರಿಯಿಂದ
ಸರಿಯಿಂತು ಜಡದ ವಿಚಾರವೆನ್ನು
ಮರಳೆ ಮನವೆ ಕೇಳು ನಿತ್ಯಮುಕ್ತಳು
ಭರಿತಳಾಗಿ ಹರಿಯ ಧೇನಿಸುತ್ತ
ಸ್ಥಿರವಾಗಿ ಇಪ್ಪಳು ಇವುಗಳಲಿ ಸಿದ್ಧಾ
ಅರಿಯಲಾಗದು ಇತರ ಜಡ ಚೇತನಗಳಲ್ಲಿ
ಮರಿಯಲಾಗದು ಚತುರ ಬಗೆ ತತಿ ಜಗದೊಳು
ಸರಿಯಿಂತು ಪ್ರಕೃತಿಯು ಚೇತನಾಚೇತನ
ಪರಮ ಪುರುಷ ವ್ಯಾಸವಿಟ್ಠಲನಂಘ್ರಿಗೆ
ಎರಗಿ ತಿಳಿಯೊ ಪ್ರಾಕೃತದ ವಿಚಾರ ॥ 3 ॥

ಅಟ್ಟತಾಳ

ಸಾದಿ ಗುಣತ್ರಯ ಮಹದಾಹಂಕಾರಾವು
ಮೋದದಿಂದಲಿ ಮನ ಗಗನಾದಿ ಪಂಚವು
ಅದೆ ಸರಿ ಆವರ್ಣ ಭೇದದಿಂದ ಶೋಧಿಸೊ
ಬುಧರೊಳು ಪ್ರಕೃತಿ ಭಾಗಗಳೆಲ್ಲ
ಭೇದಿಸಿಪ್ಪವು ನಿತ್ಯವಹುದು ನಾಶವಿಲ್ಲ
ಸಾಧಿಸಿ ತಿಳಿ ಮುಂದೆ ಚೇತನದ ವಿಚಾರ
ವೇದಗರ್ಭನಿಂದ ಶನಿ ಪರಿಯಂತ ವಿ –
ವಾದವಿಲ್ಲದೆ ದೇವತಿಗಳಿಗಿಪ್ಪರು ಎನ್ನು
ಈ ದೇವತಿಗಳ ಅಂಶಗಳು ವಿಚಾರಿಸೆ
ಕ್ರೋಧ ಮೋಹಗಳಿಲ್ಲ ಅಸುರಾವೇಶವಿಲ್ಲ
ಸಾಧನಕೆ ಜ್ಞಾನ ತಿರೋಹಿತಯಿಲ್ಲ
ಆದರಿಸಿ ನೋಡೆ ಪ್ರಾಕೃತ ಜಡ ಚೇತ –
ನದ ಸ್ಥಿತಿಯು ಇಂತು ಇತರ ಜೀವರು ಇಲ್ಲ
ವಾದವಿಲ್ಲ ವಿಕೃತ ಇದರಂತೆ ಸಿದ್ಧ ವಿ –
ನೋದದಿಂದಲಿ ಜಡವಧಿಕ ಉಭಯದಲ್ಲಿ
ಬೋಧ ಮೂರುತಿ ನಮ್ಮ ವ್ಯಾಸವಿಟ್ಠಲ ಜಗ –
ದ್ವೇದನೆಂದು ನಂಬು ಮುಕ್ತಿಲಿ ಇಂಬು ॥ 4 ॥

ಆದಿತಾಳ

ಕೇಳು ವೈಕೃತದೊಳಗೆ ಪಿಂತೆ ಪೇಳಿದವೆಲ್ಲ
ಸಾಲಾಗಿ ಬಂದಿವೆ ಜಡ ಚೇತನಗಳಿಲ್ಲಿಗೆ
ಶ್ರೀಲಕುಮಿ ದೇವಾಂಶಿಗಳು ಮೇಲೆ ತ್ರಿವಿಧ ಜಡವು
ಸ್ಥೂಲ ಜಡ ಜೀವರಲ್ಲಿ ಮಿಳಿತವಾಗಿಪ್ಪವು
ಹೇಳುವೆ ಇದರ ವಿನಹಾ ಇತರ ಮುಕ್ತಿ ಯೋಗ್ಯರು
ಖೂಳ ಜನರು ನಿತ್ಯ ಸಂಸಾರಿಗಳು ಇಂತು
ಆಲಸವಿಲ್ಲದೆ ಸಿದ್ಧವಾಯಿತು ವೈಕೃತ
ಲಾಲಿಸು ಜಡ ಚೇತನ ಇವೆ ಸಿದ್ಧ ಇನ್ನೊಂದಿಲ್ಲ
ಪಾಲಸಾಗರ ಶಾಯಿ ವ್ಯಾಸವಿಟ್ಠಲನ ಪಾದ –
ವೆಲ್ಲವಿಂತು ಭಜಿಸಿ ಕೇಳು ಯೋಚನೆ ಬಿಡು ॥ 5 ॥

ಜತೆ

ನಿತ್ಯಾ ನಿತ್ಯಗಳಲ್ಲಿ ನಿಸ್ಸಾರ ಸಾರವ
ಅತ್ಯಂತದಲಿ ತಿಳಿದು ವ್ಯಾಸವಿಟ್ಠಲನ್ನ ಭಜಿಸು ॥

https://drive.google.com/file/d/10WZ3YAceNu0v0gJClc-ZPTB11pdgU891/view?usp=drivesdk

Leave a Reply

Your email address will not be published. Required fields are marked *